Sunday, July 22, 2012

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,
ನಾ ಕಟ್ಟಿಕೊಂಡ ಒಲವಿಗೆ ಸಾವೇಇಲ್ಲ ಬದುಕಲು ಮತ್ತೆ,ಮತ್ತೆ.......

ಸುಡುಗಾಡ ಬೂದಿಯದು  ಸುಳಿಯುತ್ತಿದೆ ಬೇಡವೆಂದರೂ ಸುಳಿಯಂತೆ,
ಮರುಭೂಮಿಯಿದು ಮರು-ಭೂಮಿಯಾಗುವ ಕನಸಿಗೆ ನೀ  ಮಳೆಯಂತೆ.

ಆಕಾಶದಗಲಕ್ಕು ಅವಕಾಶಗಳಿವೆ  ಎಲ್ಲಾದರು ಇಳಿದುಬಿಡು ಮಂತ್ರಜಲವೇ,
ಅಲ್ಪಯುವಾಗಲೋಲ್ಲದ ಅನುರಾಗಿಯ ಕೊರಗಲ್ಲವಿದು, ಆಮಂತ್ರಣ ಒಲವೆ.

ಬಾ ... ಬಂದಾದ ಮೇಲೆ ಮರೆತು ಬಿಡು ನೀ ಹಿಂದಿರುಗುವ  ದಾರಿಯ
ಬಯಕೆಯಲ್ಲ ಭಯವಿದು, ಕರುಣೆತೋರಿ ಕರುಣಿಸದಿರಲೆಂದು ಈ ಪರಿಯ

Friday, July 20, 2012

ಅರೆಗಳಿಗೆಯಾದರು ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,

ನೀ ಬಿಟ್ಟು ಹೋಗುವ  ನೆನಪುಗಳು ಕತ್ತಲನೆ ಉಳಿಸಿ ಬೆಳಗಬೇಕು ಸೊಡರಾಗಿ,
ಜೊತೆ ಇಟ್ಟು ಬರುವ  ಹೆಜ್ಜೆಗಳು ಕೊನೆಯವರೆಗೂ ಕಾಲ, ಕಾಡಬೇಕು ತೊಡರಾಗಿ.

ಪ್ರತಿ ಬಾರಿಯೂ ವಿಧಾಯವ ಹೇಳುವ ನಿನ್ನ ಕಣ್ಣುಗಳು ನಿರ್ದಯವಾಗಿ ನನ್ನ ಅನುದಿನವು ಕೊಲ್ಲಬೇಕು,
 "ಮೊದಲು ಹುಟ್ಟಿದ್ದು ನಿನ್ನ ಪ್ರೀತಿ ನಂತರ ನಾನು" ಅನ್ನಬಹುದಾದ  ಅಸಂಬದ್ದ ಹೇಳಿಕೆಯೊಂದು ಇನ್ನ  ಅಜೀವವಾಗಿ  ನಿಲ್ಲಬೇಕು.

ವಶಕಿಟ್ಟುಕೊಳ್ಳುವ  ನಿನ್ನ ನೆನಪುಗಳ ಒಳಗೆ ನಾ ನರಳಬೇಕಿತ್ತು,
ವಿಷವಿಕ್ಕದೆ ಕೊಲ್ಲುವ ಕಣ್ಣ ಹೊಳಪುಗಳಿಗೆ ಸಿಲುಕಿ ಮರಳಿದರೆ ಸಾಕಿತ್ತು.

ಕೆಲವು ದಿನವಾದರೂ ಮನದ ಕೋಣೆಯ ಬಾಡಿಗೆಗೆ ಹಿಡಿದು ನೀ ಉಳಿಯಬೇಕಿತ್ತು,
ಒಲವು ಕ್ಷಣವಾದರೂ ಅಂಗಳದಲ್ಲಿ ಅರಳಿ ಬಾಡದ ಹಾಗೆ ಮುಡಿದು ನಲಿಯಬೇಕಿತ್ತು.
ಅರೆಗಳಿಗೆಯಾದರು   ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,
ಮರಗುಳಿಯೇ ಆದರು ನೀನ್ನಲ್ಲಿಯೇ ಸೇರುತ್ತಿದ್ದೆ ಎಲ್ಲಾದರೂ ಸುತ್ತಿ.

Friday, July 6, 2012

ಅನಿವಾರ್ಯವಲ್ಲದ ಕ್ಷಮೆಗೆ ಅರ್ಹನಾದವನು

ಒಂದು ನೀನು ಇನ್ನೊಂದು ಹಣ ಈ ಎರಡೇ ಎರಡು ಅಪರಿಪೂರ್ಣತೆಗಳು ನನ್ನನ್ನು ಇಷ್ಟು ತಡವಾಗಿ ಈ ಪರಿ ಕಾಡದೆ ಇದ್ದಿದ್ದರೆ ಬಹುಶ ಈ ಬರಹ ಬರೆಯುವ  ಅವಶ್ಯಕತೆಯೇ ಇರುತ್ತಿರಲಿಲ್ಲ ಹುಡುಗಿ! ಇಷ್ಟಕ್ಕೂ ನಿನ್ನಿಂದ ಹಣವಾಗಲಿ ಅಥವಾ ಹಣದಿಂದ ನೀನಾಗಲಿ ಸಿಗುವುದಕಿಂತ ದೊಡ್ಡ ದುರಂತ  ಮತ್ತೇವುದಿದೆ ಹೇಳು? ಈ ಬದುಕಿಗೆ ನಿನ್ನ ನೀರಿಕ್ಷೆ ಇದೆಯೋ ಹೊರತು ನಿನ್ನಿಂದ (ಮನಸಿಗೆ ವಿರುದ್ದವಾಗಿ) ಯಾವುದೇ ನಿರೀಕ್ಷೆಗಳಿಲ್ಲ
ಇದುವರೆಗಿನ ಈ ಬದುಕು ನಿನ್ನ ಅಪರಿಚಿತವಾಗಿರಿಸಿದೆ ಅನ್ನುವುದೊಂದೇ ನನಗೆ ಬಹು ದೊಡ್ಡ ಸಮಾದಾನ ಏಕೆಂದರೆ ಪರಿಚಿತಗೊಂಡ ಕೆಲವೇ ಕೆಲವರಲ್ಲಿ ನಿನಗಾಗಿ ಎತ್ತಿಟ್ಟುಕೊಳ್ಳಬಹುದಾದ  ಮೌಲ್ಯಗಳಿದ್ದವೆ ಹೊರತು ಸಂಪೂರ್ಣ ನೀನಿರಲಿಲ್ಲ ಇಷ್ಟಕ್ಕೂ ನನ್ನ ಪಾಲಿಗೆ ನೀನೆಂದರೆ: ಸದ್ದಿಲ್ಲದೇ ಹರಿಯುವ ನದಿ, ಸಹನೆಯಲಿ ಕಾದು ಕುಳಿತ ನಿಧಿ, ಏಕಾಂತದಲಿ ಸುರಿಯುವ ಮಳೆ, ಸೋಲುಗಳಿಗೆ ದೃತಿಗೆಡದ ನಾಳೆ,  ಸಾಮಿಪ್ಯಕ್ಕೆ ಶ್ರುತಿಗೊಳ್ಳಬೇಕಾದ ವೀಣೆ, ಅಸಹಾಯಕತೆಗೆ ಅತಿಯಾದ ಕರುಣೆ, ನಿನ್ನದು ಮಂತ್ರ ಒಲಿದ ಕಣ್ಣು,  ಮನಸು ಮಾಗಿದ ಹಣ್ಣು,  ಮುಗುಳುನಗು ನಿನ್ನ ಒಡವೆ, ಗುಳಿಕೆನ್ನೆ ಸಾಗರದ ದಡವೇ!
ಇದೆಲ್ಲವ ಹೊರತುಪಡಿಸಿಯು  ನನಗೆ ನೆನಪಾಗುವುದು ಏನೆಂದರೆ ಗೆಳೆಯರೊಂದಿಗೆ ಹೋಗಿದ್ದ ಜಾತ್ರ್ರೆಗಳಲ್ಲಿ  ಅವರು ಸಿಕ್ಕ ಸಿಕ್ಕ ಹುಡುಗಿಯರ ಮುದ್ದನೆಯ ಅಲಂಕಾರಕ್ಕೆ, ಮದ್ದಾನೆಯ ಅಹಂಕಾರಕ್ಕೆ ಮನಸೋತು ತಿರುಗುತಿದ್ದರೆ ಮೆರವಣಿಗೆ ಹೊರಟಿರುವುದು  ದೇವರ ಉತ್ಸವ ಮೂರ್ತಿಯ ಅಥವಾ ಈ ಹುಡುಗಿಯರ ಉತ್ಸಾಹ ಮಾತ್ರವ ಎಂದು ಅನಿಸತೊಡಗಿದ್ದದ್ದು  ಅದೇನೇ ಇದ್ದರು  ನೀ ಎಂದಿಗೂ ಮೆರವಣಿಗೆ ಹೊರಡುವುದಿಲ್ಲ ನಿನ್ನಲ್ಲಿ ಅಲಂಕಾರ, ಆತ್ಮೀಯತೆ, ಆಕರ್ಷಣೆಗಳೆಲ್ಲ  ದೇಹಕಿಂತ ಮನಸಿಗೆ ಹತ್ತಿರವಾಗಿವೆ ಎಂದು ನನಗೆ ಗೊತ್ತು

ಕಾಲಿಟ್ಟಲೆಲ್ಲ ಒಲವಿನ ಹೊರತೆಗಳು, ಕೈ ಚಾಚಿದ್ದಾರೆ ಸಿಗುತಿದ್ದ ಅವಕಾಶಗಳು ಕಣ್ನ್ ಬೆರೆಸಿದ್ದರೆ ಕರಗುತಿದ್ದ ಮನಸುಗಳು ಕ್ಷಣ ಕ್ಷಣವೂ ನನ್ನನ್ನು ಗಟ್ಟಿಗೊಳಿಸಿ ಬಿಟ್ಟಿವೆ ಬೀದಿ ಬದಿಯ ವ್ಯಾಪಾರದ ಸರಕಿಗಿಂತ ಸಲೀಸಾಗಿ ಸಿಗುತ್ತಿರುವ ಪ್ರೇಮ ಸಾಮಿಪ್ಯವು ಕೂಡ ನಿನ್ನಂತೆ ಸಪ್ಪೆ ಅನಿಸುತ್ತಿದೆ ಎಂದು ಬರೆದುಕೊಳ್ಳುವಷ್ಟು  ಸ್ಪುರದ್ರೂಪಿ ನಾನಲ್ಲ.  ನನ್ನದು ಸಾಮಾನ್ಯ ಹೆಸರು, ಸಾದಾರಣ ರೂಪು, ಸರಳ ಜೀವನ, ತೀರ ಸಪ್ಪೆ ಅನಿಸುವ ಭಾವನೆ, ಸಹನೆ ಎಂದು ಕರೆಸಿಕೊಳ್ಳುವ ಸೋಮಾರಿತನ ಅನ್ನುವುದೆಲ್ಲ ಎಷ್ಟು ಸತ್ಯವೋ,  ಇವ್ಯಾವುಗಳಿಗು ನಿನ್ನ ಬರ ಸೆಳೆಯುವ ತಾಕತ್ತಿಲ್ಲ ಅನ್ನುವುದು ಅಷ್ಟೇ ಸತ್ಯ. ಆದರೆ ಈ ಚಿಕ್ಕ ಜೀವನಾವದಿಯಲ್ಲಿ ನಿನ್ನೊಂದಿಗೆ ಸಾಗಬೇಕಾದ ಪ್ರಯಾಣ ಸುದೀರ್ಘವಾಗಿದೆ ಗೆಳತಿ. ಇದುವರೆಗೆ ನಡೆದ ಹಾದಿಯಲೆಲ್ಲು ತೆರೆದ ಬಾಗಿಲ ಮುಂದೆ ನಿಂತವನಲ್ಲ ಮುಚ್ಚಿದ ಬಾಗಿಲ ತಟ್ಟಿಯೂ ಇಲ್ಲ. ಹಾಗಂದ ಮಾತ್ರಕ್ಕೆ  ಅಮಾಯಕತೆಯು ನನಗಿಲ್ಲ,  ಮಾಡಿದ ಅಡಿಗೆಯ ರುಚಿ ತಿಳಿಯಲು ತಿನ್ನಲೆಬೇಕೆಂದೆನಿಲ್ಲವಲ್ಲ  ಬಳಸಿದ ಪದಾರ್ಥ, ಬೆರೆಸಿದ ಪ್ರಮಾಣ, ಬೇಯಿಸಿದ ಪರಿ ಇವಿಷ್ಟೇ ಸಾಕು ಸಾಮಾನ್ಯ ಜ್ಞಾನಕ್ಕೆ.
ಆಕಸ್ಮಿಕವಾಗಿ ಈ ಬರಹವದು  ನಿಮ್ಮ  ಮುಟ್ಟಿದ್ದರೆ, ಅನವಶ್ಯಕವಾಗಿ  ನಿಮ್ಮ  ಮನವ ತಟ್ಟಿದ್ದರೆ, ಅಪ್ರಯೋಜಕ ಹುಚ್ಚುತನದೊಳಗೆ ನಿಮ್ಮ  ಹಿಡಿದಿಟ್ಟಿದ್ದರೆ,  ಅದಕ್ಕಾಗಿ  ಕ್ಷಮೆ ಇರಲಿ

                                              ಅನಿವಾರ್ಯವಲ್ಲದ ಕ್ಷಮೆಗೆ  ಅರ್ಹನಾದವನು

Thursday, July 5, 2012

ನೀ ಹುಟ್ಟಿದಾಗ ಆಕೆಗೆ ನೀ ಮಗು ನೀ ಬೆಳೆದಾಗ ಆಕೆ ನಿನ್ನ ಮಗು,

ಅಗಲದಂತೆ ಹಚ್ಚಿಕೊಂಡ ಮೊದಲ ಹೆಗಲು,
ಆರುವ ಹಣತೆಯಲ್ಲ ಆಕೆ ಶಾಶ್ವತ ಹಗಲು
ಅರಿವಿಗಾಗಿ ಕಲಿತಿದ್ದೆಲ್ಲ ಆಕೆಯದೇ ಅನುಕರಣೆ,
ಅವಳಿಗೆ ಮತ್ತೊಂದು ಹೆಸರು ಇದೆ ಅದು ಕರುಣೆ
ಅದೆಷ್ಟೋ ಅಸ್ತಿತ್ವಗಳಿಗೆ ಆಕೆಯ ಹೆಸರಿನದೆ ಗುರುತು,
ಅದೇನೇ ಸಿಕ್ಕರು ಬದುಕಲಾರಳು ನಿನ್ನ ಅಶ್ರಯವ ಮರೆತು
ಅಮೃತವು ಕೂಡ ನಿಷ್ಪ್ರಯೋಜಕ ಆಕೆ ಇಲ್ಲದ ಮೇಲೆ,
ಅರೆ ಗಳಿಗೆ ಇದ್ದರು ಹುಟ್ಟು ಎಂಬುದು ಆಕೆಯದೇ ಲೀಲೆ
ಪ್ರತಿ ಕಣ್ಣುಗಳೋಳಗು ಮೂಡಿದ ಮೊದಲ ಚಿತ್ರ,
ಎಲ್ಲರ ಬದುಕಿನಲು ಅವಳದೆ ಮುಖ್ಯ ಪಾತ್ರ
ಸಾವಿನ ಅಂಚಿನಲಿ ನಡೆದು ಉಸಿರು ನೀಡಿದಳು ನಿನ್ನ ಹೆತ್ತು,
ಸಾವಿರ ಅಪಾಯಗಳ ನಡುವೆಯೂ ನಿನ್ನ ಉಳಿಸಿದ್ದು ಕೈ ತುತ್ತು
ನೀ ಹುಟ್ಟಿದಾಗ ಆಕೆಗೆ ನೀ ಮಗು ನೀ ಬೆಳೆದಾಗ ಆಕೆ ನಿನ್ನ ಮಗು,
ನಿನ್ನ ಗೆಳೆತನವೆ ಆಕೆಯ ಬೀಗು ಪ್ರತಿ ಗೆಲುವು ಅಕೆಯ ಮುಗುಳುನಗು.
(ಜಗತ್ತಿನಲಿ ಪ್ರತಿ ಜೀವಿಗೂ ಪರಿಶುದ್ದ ಪ್ರೀತಿಯನ್ನು ಪರಿಚಯಿಸುವುದೇ ತಾಯಿ, ನಿನ್ನ ದೇಹದಲ್ಲಿ ನಿಸ್ತೇಜಗೊಳ್ಳಬಹುದಾದ ಕಟ್ಟ ಕಡೆಯ ಜೀವಕೋಶದ ಮೇಲು ಆಕೆಯದೇ ಪ್ರದಾನ ಹಕ್ಕು.)